ನನ್ನ ಕವಿತೆಗಳು - ವರುಣ್ ರಾಜ್ ಜೀ.

 


ರಾಮ ನಾಮ ಜಪ

 

ನನಗೂ ರಾಮ ನಾಮ ಜಪಿಸುವ ಆಸೆ,

ರಾಮ ನಾಮ ಪರಮ ಪಾವನ ನಾಮ

ಆಹಾ, ಮೈ ರೊಮಾಂಚನ !

ರಾಮ ನಾಮ ಜಪಿಸುತ್ತಾ ಧ್ಯಾನಕ್ಕೆ ಕುಳಿತೆ.

ಅಯ್ಯೋ, ಏನದು ಆಕ್ರಂಧನ ?

ವನ ದೇವತೆ ತಾಟಕಿಯ ರೋಧನೆಯಹಾಗಿದೆ ?

ಆಗಲಿ ಬಿಡು , ನನಗೇನು ?

ಧ್ಯಾನ ಮುಂದುವರೆಸಿದೆ....

ಅಯ್ಯೋ , ಇದೇನು ರೋಧನೆ ?

ಅಣ್ಣತಮ್ಮರು ಸೇರಿ ನನ್ನ ಕಿವಿಮೂಗು

ಕುಯ್ದರೆಂದು ರೋಧಿಸುತ್ತಿರುವಳು!

ಯಾರಿವಳು ? ಯಾರಾದರೆ ನನಗೇನು ?

ಧ್ಯಾನ ಮುಂದುವರೆಸಿದೆ.....

ಇವನ್ಯಾರೋ ಗಾಯಗೊಂಡು, ಬಿದ್ದು

 ಹೊರಳಾಡುತ್ತಿರುವನು, ಯಾರಿವನು ?

ಗಡ್ಡ ಬಿಟ್ಟು ತಪಸ್ವಿಯ ಹಾಗಿದಾನಲ್ಲ !

ಶಂಭುಕನೇ ? ಆಗಲಿ ಬಿಡು, ನನಗೇನು ?

ಧ್ಯಾನ ಮುಂದುವರೆಸಿದೆ...

ಯಾರೀಕೆ ? ಬೆಂಕಿಯಲ್ಲಿ ಬಿದ್ದು ಅಳುತ್ತಿರುವಳು ?

ಯಾರೀಕೆ? ಕಾಡಿನಲ್ಲಿ ಅಲೆಯುತ್ತಿರುವಳಲ್ಲ !

ಗರ್ಭಿಣಿಯ ಹಾಗೇ ಇದ್ದಾಳೆ.

ಆದರೇನು ಬಿಡು, ನನಗೇನು ?

ನಾನು ರಾಮ ನಾಮ ಜಪ ಮಾಡಬೇಕು !

ಧ್ಯಾನ ಮುಂದುವರೆಸಿದೆ....

ಅಯ್ಯೋ , ಯಾರೀತ ಹೀಗೆ ಅಳುತ್ತಿದ್ದಾನೆ ?

ರಾಮನೇ ? ಹೌದು, ರಾಮ ! ನನ್ನ ರಾಮ !

ಏಕೆ ಅಳುತ್ತಿರುವೆ ರಾಮ ? ಏನಾಯಿತು !

ನಾನು ಅಳುತ್ತಾ ಕೇಳಿದೆ !

ಧರ್ಮದ ಮತ್ತಿನಲ್ಲಿ ಸಾಕಷ್ಟು

ಅನ್ಯಾಯ ಮಾಡಿದೆ ಮಗುವೇ .

ಇನ್ನೇನಿದೆ ನನಗೆ ಮಾರ್ಗ ? ಈಗ ಅಳುವುದನ್ನು ಬಿಟ್ಟು !

ನಾನು ಹೇಳಿದೆ .ಅಳಬೇಡ ರಾಮ

 ಅಳಬೇಡ. ನಾನೇನು ಮಾಡಲಿ ?

ಎಲ್ಲಾ ಮರೆತು ಜಾಣ ಕುರುಡು ತೋರಲು

 ನನಗೂ ಬೇರೇನಿದೆ ಮಾರ್ಗ ?

ನಿನ್ನ ನಾಮ ಜಪ ಮಾಡುವುದನ್ನು ಬಿಟ್ಟು. - ವರುಣ್‌ ರಾಜ್‌ ಜೀ



 


ಕವಿತೆ ,

ಕವಿತೆ ಬರೆಯಬೇಕು...

ಕವಿತೆ ಬರೆಯಬೇಕು ಎಂಬ ಆಸೆ.

ಬರೆದೆಕವಿತೆ.

ಪ್ರಶ್ನೆಯೊಂದು ಹುಟ್ಟಿತ್ತು!

ಯಾರಿಗಾಗಿ ಕವಿತೆ ? ಯಾತಕ್ಕಾಗಿ?

ಉತ್ತರ ಹುಡುಕಬೇಕಲ್ಲವೇ...

ಹುಡುಕಿದೆ ಹುಡುಕಿದೆ ಹುಡುಕಿದೆ

ಸಿಗಲೇ ಇಲ್ಲ,

ನಿಮಗೆ ಸಿಕ್ಕಿತೇ ?

ಸಿಗಬಹುದು, ಸಿಗದೇ ಇರಬಹುದು !

ಕನಿಷ್ಟ ಪ್ರಶ್ನೆಯೊಂದು ಹುಟ್ಟಿತಲ್ಲ !

ಅದೇ ಸಾರ್ಥಕತೆ...

ಇದೋ ನನ್ನ ಕವಿತೆ.     - ವರುಣ್‌ ರಾಜ್‌ ಜೀ

 



ದೀಪ 

ಕವಿತೆಯೊಂದ ಬರೆಯಬೇಕು

ದೀಪದ ಕುರಿತು !

ದೀಪ ಬೆಳಗಿಸಿ ಕಾಯಿಲೆ ಓಡಿಸಿದ ಕುರಿತು.

ಹೌದು !

ಬರೆಯಬೇಕು.

ಮತೇನು ಸಮಸ್ಯೆ ?

ಬರೆಯಬಹುದು ಕವಿತೆ 

ದೀಪದ ಬಗ್ಗೆ

ದೀಪದ ಬೆಳಕಿನ ಬಗ್ಗೆ !

ಆದರೆ ಮನಸ್ಸು ಒಪ್ಪುತಿಲ್ಲವಲ್ಲ 

ಏಕೆ ?

ದೀಪದ ನೆರಳಿನ ಕತ್ತಲೆಯಲ್ಲಿ ನರಳುತ್ತಿರುವವರ,

ದೀಪದ ಬೆಂಕಿಗೆ ಕೈ ಸುಟ್ಟುಕೊಂಡವರ ಆಕ್ರಂಧನ

ಕಿವಿಯಲ್ಲಿ ಅನುರಣಿಸುವಾಗ 

ಹೇಗೆ ಬರೆಯಲಿ ಕವಿತೆ ?

ದೀಪದ ಮೇಲೆ ! - ವರುಣ್‌ ರಾಜ್‌ ಜೀ.

 

       ದಾನಧರ್ಮವ ಮಾಡಬೇಕಣ್ಣ 

ಹುಟ್ಟಿದ ಮೇಲುಪಯುಕ್ತನಾಗಿ ಹೋಗಬೇಕಣ್ಣ.

ದಾನ ಧರ್ಮವ ಮಾಡಬೇಕು ದಾನಿ ನೀನೆಂದೆನಿಸಬೇಕು, ದಾನ ಮಾಡಿದ ಪುಣ್ಯನಿನ್ನ ಸಂತತಿಗೆ ಶುಭ ತರುಲುಬೇಕು..

//ದಾನ// 

ರಕ್ತದಾನ ಶ್ರೇಷ್ಠದಾನ, ಪ್ರಾಣ ಉಳಿಸುವ ಜೀವದಾನ. 

ರಕ್ತದಾನ ಮಾಡಿದವನಿಗೆ ಇಲ್ಲವಣ್ಣ ರೋಗಗುಜಿನ. /ದಾನ/

ನೇತ್ರದಾನ ಶ್ರೇಷ್ಠದಾನ , ದಾನದಲ್ಲಿಯೇ ದೊಡ್ಡದಾನ.

ನೇತ್ರದಾನ ಮಾಡಿ ನೀನು ಎರಡು ಜೀವವ ಬೆಳಗಬಹುದು. /ದಾ‌ನ/

ದೇಹ ದಾನವ ಮಾಡಬೇಕು, ದೇಶ ಸೇವೆಯ ಮಾಡಬೇಕು.

ದೇಶವೆಂದರೆ ದೇಶವಲ್ಲ ,ಜನತೆಯೆಂಬುದ ತಿಳಿದು ನೀನು. /ದಾನ/

ದಾನ ಧರ್ಮವ ಮಾಡು ನೀನು, ನಿನ್ನ ದೇಹವ ಜನರ ಸೇವೆಗೆ.                                                    ಸತ್ತಮೇಲೆ ಮಾಡುವಂತಹ ಪುಣ್ಯತರುವ ದಾನವಣ್ಣ. /ದಾನ/

ಮಣ್ಣಿನಲ್ಲಿ ಮಣ್ಣ ಸೇರಿ, ಬೆಂಕಿಯಲ್ಲು ಬೂದಿಯಾಗಿ ಕೆಡುವ ದೇಹವ ನಾಲ್ಕು ಜನರ ಒಳಿತಿಗೇ ನೀ ದಾನ‌ಮಾಡು. 

ದಾನಧರ್ಮವ ಮಾಡಬೇಕಣ್ಣ 

ಹುಟ್ಟಿದ ಮೇಲುಪಯುಕ್ತನಾಗಿ ಹೋಗಬೇಕಣ್ಣ

 

- ವರುಣ್‌ ರಾಜ್‌ ಜೀ.


Comments

Popular posts from this blog

ಶರಣರ ಚಿಂತನ ಮಾಲಿಕೆ ವಚನಗಳಲ್ಲಿ ಗುರು

ಸಲೈಂಗಿಕತೆಯನ್ನು ಸಮಾಜದ ಸಹಜ ಭಾಗವೆಂದು ಒಪ್ಪಿಕೊಳ್ಳುವ ಬಗ್ಗೆ ; ಒಂದು ಅವಲೋಕನ (ಲೇಖನ) - ವರುಣ್‌ ರಾಜ್‌ ಜೀ.

ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.