ಕೋಲಾರ ಜಿಲ್ಲೆಯ ತತ್ವಪದಕಾರರು : ಒಂದು ಅವಲೋಕನ.
ಕೋಲಾರ ಜಿಲ್ಲಾ ಪರಿಸರದಲ್ಲಿ ವಚನ, ಕೀರ್ತನ, ತತ್ವಪದ ಮುಂತಾದ ಅನುಭಾವಿ ಸಾಹಿತ್ಯ ಪರಂಪರೆ ಹಾಗೂ ಅಚಲ, ಆರೂಢ, ಅವಧೂತ, ಸೂಫಿ, ದಾಸ ಮುಂತಾದ ಅನುಭಾವಿ ಆಧ್ಯಾತ್ಮ ಪರಂಪರೆಗಳು ಇವೆ. ಪ್ರತಿಯೊಂದು ಊರಿನಲ್ಲೂ ಜನರೆಲ್ಲ ಜಾತಿ, ಮತ, ಭೇದಗಳನ್ನು ಮರೆತು ಒಂದಾಗಿ ಸೇರಿ ತತ್ವಪದಗಳನ್ನು ಭಜನೆಯ ಹಾಡಿ, ವಿಚಾರಕ್ಕೆ ಹಾಕುವ, ಚರ್ಚಿಸಿ ವಿವರಿಸಿಕ್ಕೊಳ್ಳುವುದನ್ನು ನೊಡಬಹುದಾಗಿದೆ. ಇಂತಹಾ ತತ್ವಪದಕಾರರ ಪರಂಪರೆ ಅವಿಭಜಿತ ಕೋಲಾರ ಜಿಲ್ಲೆಯಾದ್ಯಂತ ಹರಡಿದ್ದು ಜಿಲ್ಲೆಯ ಕೆಲವು ತತ್ವಪದಕಾರರನ್ನು ಅವರ ಕಾಲ ಕೃತಿ ಹಾಗೂ ವಿಚಾರಗಳೊಂದಿಗೆ ಪರಿಚಯಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗುವುದು. ಕೈವಾರ ಯೋಗಿನಾರೇಯಣಪ್ಪ(ತಾತಯ್ಯ)ನವರು. ೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳ ಮಗನಾಗಿ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಯಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮ ಚಿಂತನ - ಮಂಥನಗಳಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ಐಹಿಕ ವಿಷಯಗಳ ಕುರಿತು ಹ...